ಸರಳ,ಸುಂದರ ನಮ್ಮ ಮೈಸೂರು ನಗರಿ
ಬಹು ಆತ್ಮೀಯ ಜನರಿಲ್ಲಿ ಮಾತನಾಡಿಸುವ ಪರಿ
ಹೀಗೆನ್ನುತ್ತಿದೆ ನನ್ನ ಕಲ್ಪನಾಲಹರಿ
ನೆನೆದೊಡೆ ಅಲ್ಲಿದ್ದರೆ ನಾವು ಪುಣ್ಯವಂತರೇ ಸರಿ
ಕೇವಲ ಪ್ರಾಸ ಬಳಸಿದೊಡನೆ ಇದು ಕವಿತೆಯಲ್ಲ
ಕವಿತೆ ರಚಿಸಲು ನಾ ಕವಿಯೂ ಅಲ್ಲ
ಆದರೂ ಮೈಸೂರ ಹೊಗಳಲು ಮನ ಬಯಸುವುದಲ್ಲ
ಇದರ ಮರ್ಮ ಅವನೇ ಬಲ್ಲ
ಮನೆಯ ಕಡೆ ಹಿಡಿದೊಡೆ ಹಾದಿ
ಮಂಡ್ಯ ಕಂಡೊಡೆ ರಸ್ತೆಬದಿ
ನಮ್ಮೂರಿರುವುದು ಸನಿಹದಿ
ಎಂದರಿತಾಗ ನೆಮ್ಮದಿಗಿದು ತಳಹದಿ
ಒಂದೆಡೆ ಶ್ರೀರಂಗಪಟ್ಟಣ,ರಂಗನತಿಟ್ಟು
ಮತ್ತು ಕೃಷ್ಣರಾಜಸಾಗರ ಅಣೆಕಟ್ಟು
ಚಾಮುಂಡಿಬೆಟ್ಟದಿ ಹರಕೆ ತೊಟ್ಟು
ಸಾಗಬಹುದು ನಂಜನಗೂಡಿನತ್ತ ಹೆಜ್ಜೆಯಿಟ್ಟು
ಆಹಾ ಎಂತಹ ಸುಂದರ ನಗರ
ಒಮ್ಮೆ ನೋಡಬೇಕಿಲ್ಲಿ ದಸರ
ಹೊನ್ನ ಪಲ್ಲಕ್ಕಿಯಲ್ಲಿ ಮೆರಗುವ ದೇವರ
ಹಿಂದೆಯೇ ಬರುವ ಜನಸಾಗರ
ವಾತಾವರಣದಿ ಧೂಳಿಲ್ಲ
ಜನರ ಮನದಿ ಕಲ್ಮಶವಿಲ್ಲ
ಭಾಷೆಯಲ್ಲಿ ಹುಳುಕಿಲ್ಲ
ಬೆಂಗಳೂರಿನ ಗಾಳಿ ಇನ್ನು ಸೋಕಿಲ್ಲ
ಮತ್ತೂ ಬರೆಯಲು ಮನ ಬಯಸಿದರೂ
ಓದಬೇಕಲ್ಲವೆ ಜನರು?
ನಮ್ಮೂರಿನ ಮೆರಗ ಬಣ್ಣಿಸಲು ಬಾರದಿದ್ದರೂ
ಅದು ಬಹಳ ಚೆಂದವೋ ಎನ್ನುತಿದೆ ಎನ್ನುಸಿರು
ನಾನು ಸುಮಾರು ಹದಿನೈದು ವರ್ಷಗಳು ಸರಳವಾಗಿ, ಯಾವುದೇ ಝಂಝಾಟವಿಲ್ಲದೆ ಕಳೆಯುವುದಕ್ಕೆ ಕಾರಣವೇ ಮೈಸೂರು ಇರಬಹುದು..ಈ ಊರಿನಲ್ಲಿರುವ ಸರಳತೆಯನ್ನು ನಾನು ಬೆಂಗಳೂರಿನಲ್ಲಿ ಕಾಣಲಿಲ್ಲ..ನನಗೇನೂ ಹೆಚ್ಚು ಅನುಭವವಿಲ್ಲ..ಆದರೂ ಬಾಲ್ಯ ಹಾಗೂ ವಿದ್ಯಾರ್ಥಿಜೀವನ ಸಾಂಗವಾಗಿ ಸಾಗಿತೆಂದರೆ ಅರ್ಧ ಪ್ರಭಾವ ಈ ಊರಿನದು..ಎಲ್ಲ ಕನ್ನಡಿಗರೂ ಒಮ್ಮೆ ಬಂದು ಇಲ್ಲಿ ತಂಗಿ ನೆಮ್ಮದಿ ಎಂದರೇನೆಂದು ಕಂಡುಕೊಂಡು ಹೋಗಬಹುದಾದಂತಹ ಊರು..ಬೆಂಗಳೂರಿನಲ್ಲಿ ಸುಮಾರು ಎರಡು ವರ್ಷ ಇದ್ದ ಮೇಲೆ ನನಗೆ ಮೈಸೊರಿನ ವೈಶಿಷ್ಟ್ಯ ಅರಿವಾಗಿದ್ದು..ದೇವರೇ!ನಮ್ಮೂರು ಬೆಂಗಳೂರಿನಂತಾಗದಿರಲಿ ಎಂದೆಷ್ಟು ಬಾರಿ ಕೋರಿಕೊಂಡಿರುವೆನೋ..ಮೈಸೂರಿನ ನೆನಪು ಕಾಡುತ್ತದೆ..ಏನು ಮಾಡುವುದು..ಭಾರತಕ್ಕೆ ಮರಳಲು ಇನ್ನೂ ಸಮಯ ಬಂದಿಲ್ಲ..ಮಾನಸಗಂಗೋತ್ರಿಯ ತಂಪಾದ ವಾತಾವರಣ,ಕುಕ್ಕರಹಳ್ಳಿ ಕೆರೆಯ ಸರಳ ಸೌಂದರ್ಯ,ಚಾಮುಂಡಿ ಬೆಟ್ಟ ಹಾಗು ಒಂಟಿಕೊಪ್ಪಲ್ ವೆಂಕಟೇಶ್ವರ ದೇವಸ್ಥಾನದಲ್ಲೊದಗುವ ಸಮಾಧಾನ, ಗಾಯತ್ರಿ ಟಿಫಿನ್ ರೂಮ್ನತ್ತ ಸುಳಿದಾಗ ಮೂಗಿಗೆ ಬಡಿಯುವ ಬೆಣ್ಣೆ ಮಸಾಲೆ ದೊಸೆಯ ಪರಿಮಳ, ನಮ್ಮ ಕಾಲೇಜಿನಲ್ಲಿ ನಡೆಯುತ್ತಿದ್ದ ಆಟಪಾಠಗಳು - ಇವಕ್ಕೆಲ್ಲ ಮನಸ್ಸು ಹಾತೊರೆಯುತ್ತದೆ..ಯಾವಾಗಲೂ ಇಲ್ಲದ್ದಕ್ಕೆ ಆಸೆ ಪಡುವುದು ಸಹಜವಲ್ಲವೇ..
ಜೆ.ಪಿ.ನಗರ,ಜಯನಗರ,ಕುವೆಂಪುನಗರ,ಲಕ್ಷ್ಮಿಪುರಮ್,ವಿಜಯನಗರ ಹೀಗೆ ಹೆಸರುಗಳೆಲ್ಲ ಬೆಂಗಳೂರಿನಲ್ಲಿದ್ದರೂ ಸಹ ಅಜಗಜಾಂತರ ವ್ಯತ್ಯಾಸ..ಬೆಂಗಳೂರನ್ನು ನಾ ತೆಗಳುತ್ತಿಲ್ಲ..ಎಷ್ಟಾದರೂ ನಮ್ಮೂರು ನನಗೆ ಹೆಚ್ಚೇ..ಇದು ಕೇವಲ ನನ್ನ ಅನುಭವ,ಅಭಿಪ್ರಾಯ..ಮತ್ತೇನೂ ಬರೆಯಲು ತೋಚುತ್ತಿಲ್ಲ..ನೆನಪುಗಳು ಕಾಡುತ್ತಿವೆಯಷ್ಟೇ..